ನೆಲಮಂಗಲ: ಅಪ್ರಾಪ್ತ ಬಾಲಕಿಗೆ ಮದುವೆಗೆ ಸಿದ್ಧತೆ ನಡೆಸಿದ್ದ ಪೋಷಕರಿಗೆ ಅಧಿಕಾರಿಗಳು ಶಾಕ್ ನೀಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.
ಕೋಮಲ ಎಂಬ ಅಪ್ರಾಪ್ತ ಬಾಲಕಿಯನ್ನು ಕೇಶವ್ ಗೌಡ ಎಂಬಾತನಿಗೆ ಕೊಟ್ಟು ಮದುವೆ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿದ್ದವು. ನೆಲಮಂಗಲದ ಕಾವಾಡಿ ಮಠದ ಕಲ್ಯಾಣ ಮಂಟಪದಲ್ಲಿ ಅದ್ಧೂರಿ ರಿಸೆಪ್ಶನ್ ಕೂಡ ನೆರವೇರಿತ್ತು. ಇಂದು ಬೆಳಿಗ್ಗೆ ಅದ್ಧೂರಿ ವಿವಾಹ. ಎರಡೂ ಕುಟಿಂಬದಲ್ಲಿಯೂ ಮದುವೆ ಸಂಭ್ರಮ. ಮದುವೆ ಮಂಟಪದಲ್ಲಿ ವರ ಮಶಾಯ ವಧುವಿಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲಿಸರ ಸಮೇತ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟು ಮದುವೆ ನಿಲ್ಲಿಸಿದ್ದಾರೆ.
ಕೋಮಲಳಿಗೆ 18 ವರ್ಷ ತುಂಬಿದೆ ಎಂದು ಭಾವಿಸಿ ಪೋಷಕರು ಮದುವೆ ನಿಶ್ಚಯಿಸಿದ್ದರಂತೆ . ಆದರೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನಿತಾ ಲಕ್ಷ್ಮಿ ನೇತೃತ್ವದ ತಂಡ ದಾಖಲೆಗಳನ್ನು ಪರಿಶೀಲಿಸಿದಾಗ, ಬಾಲಕಿಗೆ 18 ವರ್ಷ ತುಂಬಲು ಇನ್ನೂ 4 ತಿಂಗಳು ಬಾಕಿ ಇರುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ದೌಡಾಯಿಸಿದ ಅಧಿಕಾರಿಗಳು ಮದುವೆ ತಡೆದಿದ್ದಾರೆ. ಎರಡೂ ಕುಟಿಂಬದವರಿಗೂ ಬಾಲಕಿ ಅಪ್ರಾಪ್ತೆ ಎಂಬುದನ್ನು ಮನವರಿಕೆ ಮಾಡಿ ಕಾನೂನಿನ ಬಗ್ಗೆ ಅರಿವು ಮೂಡಿಸಿದ್ದಾರೆ.
ಮದುವೆಗೆ ಈಗಾಗಲೇ 5 ಲಕ್ಷ ರೂಪಾಯಿ ಖರ್ಚಾಗಿದೆ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಕಾನೂನಿಗೆ ತಲೆಬಾಗಿ ಮದುವೆ ನಿಲ್ಲಿಸಿದ್ದಾರೆ. ಕೋಮಲಳಿಗೆ 18 ವರ್ಷ ತುಂಬಿದ ಬಳಿಕಆಕೆಯನ್ನೇ ಮದುವೆಯಾಗುವುದಾಗಿ ವರ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಾಲ್ಯ ವಿವಾಹ ಕಾನೂನುಬಾಹಿರ ಎಂದು ಪೋಷಕರಿಗೆ ತಿಳಿಹೇಳಲಾಗಿದೆ.

