ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ಧ ನಂದಿಬೆಟ್ಟದಲ್ಲಿ ಆಯೋಜಿಸಲಾಗಿದ್ದ 'ನಂದಿಹಿಲ್ಸ್ ಮನ್ಸೂನ್ ಮ್ಯಾರಥಾನ್' ಓಟದ ಸ್ಪರ್ಧೆಯಲ್ಲಿ ರವಿವಾರ ದುರಂತವೊಂದು ಸಂಭವಿಸಿದೆ. 21 ಕಿಲೋಮೀಟರ್ ಅರ್ಧ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ 31 ವರ್ಷದ ಯುವಕನೊಬ್ಬ ಓಡುತ್ತಿದ್ದಾಗಲೇ ದಿಢೀರ್ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಪಂಜಾಬ್ ಮೂಲದ ಅಮನ್ದೀಪ್ ಸಿಂಗ್ ಜಗಡೆ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಓಟದ ಮಧ್ಯದಲ್ಲೇ ಎದೆನೋವು, ಆಸ್ಪತ್ರೆಯಲ್ಲಿ ಕೊನೆಯುಸಿರು: ಸುಮಾರು 21 ಕಿ.ಮೀ ಓಟದ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ಅಮನ್ದೀಪ್, ನಂದಿಬೆಟ್ಟದ ಏರುದಾರಿಯಲ್ಲಿ ಅರ್ಧದಷ್ಟು ದೂರವನ್ನು ಯಶಸ್ವಿಯಾಗಿ ಕ್ರಮಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ಅವರನ್ನು ತಕ್ಷಣವೇ ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಕೊನೆಯ ಪೋಸ್ಟ್: ಮ್ಯಾರಥಾನ್ ಆರಂಭವಾಗುವ ಮುನ್ನ ಅಮನ್ದೀಪ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, "ಇಂದಿನ 21 ಕಿ.ಮೀ ಓಟದಲ್ಲಿ ಭಗವಂತ ನನ್ನ ಜೊತೆಗಿದ್ದಾನೆ" ಎಂದು ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದರು. ಆದರೆ, ಅದೇ ಅವರ ಬದುಕಿನ ಕೊನೆಯ ಪೋಸ್ಟ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
4,500ಕ್ಕೂ ಹೆಚ್ಚು ಓಟಗಾರರು ಉತ್ಸಾಹದಿಂದ ಭಾಗವಹಿಸಿದ್ದ ಈ ಮ್ಯಾರಥಾನ್ನಲ್ಲಿ ಆರೋಗ್ಯವಾಗಿದ್ದ ಯುವಕನೊಬ್ಬ ಹೀಗೆ ದಿಢೀರ್ ಮೃತಪಟ್ಟಿರುವುದು ಸಹ-ಸ್ಪರ್ಧಿಗಳಲ್ಲಿ ಹಾಗೂ ಆಯೋಜಕರಲ್ಲಿ ತೀವ್ರ ದಿಗ್ಭ್ರಮೆ ಮತ್ತು ಶೋಕವನ್ನುಂಟುಮಾಡಿದೆ.