
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರನ್ನ ಗುರಿಯಾಗಿಸಿಕೊಂಡು ಯಾವುದೇ ಷರತ್ತುಗಳನ್ನು ತಿಳಿಸದೆ ಸುಲಭವಾಗಿ ಸಾಲ ಪಡೆಯುವಂತೆ ಹಲವು ಆಮಿಷಗಳನ್ನು ನೀಡುವುದರಿಂದ ಜನರು ತಮ್ಮ ಅವಶ್ಯಕತೆಗಳಿಗಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಮತ್ತು ಖಾಸಗಿ ಸಾಲಗಾರರಿಂದ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು ಮತ್ತು ಹಣಕಾಸು ಸಂಸ್ಥೆಗಳು ಆರ್ ಬಿಐ ಮಾರ್ಗಸೂಚಿಗಳನ್ನು ಪಾಲಿಸದೇ ಕಾನೂನಿನಡಿಯಲ್ಲಿ ಮರುಪಾವತಿ ಪಡೆದುಕೊಳ್ಳುವುದನ್ನು ಬಿಟ್ಟು ಸಾಲಪಡೆದವರ ಮನೆಗೆ ಸಾಲ ವಸೂಲಿ ನೆಪದಲ್ಲಿ ಗೂಂಡಾ, ರೌಡಿಗಳನ್ನು ನಿಯೋಜಿಸಿ ನಿರಂತರ ಕಿರುಕುಳ, ದೌರ್ಜನ್ಯ ಮಾನಹಾನಿ ಉಂಟು ಮಾಡುತ್ತಿರುವುದನ್ನ ಮತ್ತು ಸಾಲಗಾರರ ಆಸ್ತಿಯ ಜಪ್ತಿ ಮಾಡುವಂತೆ ನ್ಯಾಯಾಲಯದ ಯಾವುದೇ ಆದೇಶಗಳು ಇಲ್ಲದಿದ್ದರು ಸಾಲಗಾರರ ಮನೆಯ ಗೋಡೆಗಳ ಮೇಲೆ ಈ ಮನೆಯನ್ನು ಅಡಮಾಡಲಾಗಿದೆ ಎಂದು ಬರೆಯುತ್ತಿರುವುದು ಸರಿಯಾದ ಕ್ರಮವಲ್ಲ.
ತೆಗೆದುಕೊಂಡ ಸಾಲಕ್ಕೆ ಕಂತುಗಳು ಕಟ್ಟದಿದ್ದಲ್ಲಿ ಮನೆ ಹರಾಜು ಮಾಡಲಾಗುವುದು ಎಂದು ಗೋಡೆ ಬರಹ ಬರೆಯುತ್ತಿರುವುದನ್ನು ಮತ್ತು ಮಧ್ಯರಾತ್ರಿವರೆಗೂ ಸಾಲಗಾರರ ಮನೆಮುಂದೆ ಠಿಕ್ಕಾಣಿ ಹೂಡಿ ಮನಬಂದಂತೆ ವರ್ತಿಸುವುದನ್ನು ಸಹಿಸಿಕೊಳ್ಳದ ಮಧ್ಯಮ ಮತ್ತು ಕೆಳ ವರ್ಗದ ಕುಟುಂಬದವರು ಮಾನಕ್ಕೆ ಹೆದರಿ ಕಿರುಕುಳ ದೌರ್ಜನ್ಯದಿಂದ ಕೆಲವರು ಊರುತೊರೆದರೆ ಇನ್ನು ಕೆಲವರು ಬೆಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಇದು ಕರ್ನಾಟಕ ಲೇವಾದೇವಿದಾರರ ಅಧಿನಿಯಮ-1961ರನ್ನು ಮತ್ತು ಆರ್ಬಿಐ ಮಾರ್ಗಸೂಚಿಗಳನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಂಪೂರ್ಣವಾಗಿ ಉಲ್ಲಂಘಿಸಿರುತ್ತವೆ, ಆದ್ದರಿಂದ ನಿಯಮ ಮೀರಿ ವಸೂಲಿ ನೆಪದಲ್ಲಿ ಸಾಲಗಾರರಿಗೆ ಕಿರುಕುಳ, ದೌರ್ಜನ್ಯವೆಸಗುವ ಪ್ರಕರಣಗಳು ಕಂಡುಬಂದಲ್ಲಿ ಮತ್ತು ಸಾಲಗಾರರು ಅಂತಹ ಪ್ರಕರಣಗಳ ಬಗ್ಗೆ ಠಾಣೆಗೆ ದೂರು ನೀಡಲು ಬಂದಾಗ ತ್ವರಿತವಾಗಿ ಪ್ರಕರಣ ದಾಖಲಿಸಿಕೊಂಡು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿಪಿಗೆ ಪತ್ರ ಬರೆದಿದ್ದಾರೆ!