ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿಗೆ ಬಯೋಮೆಟ್ರಿಕ್ ಬದಲಿಗೆ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಕರ್ತವ್ಯ ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಾಳ್ಕರ್ ಆದೇಶಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಖಾಯಂ ಶಿಕ್ಷಕರು, ಮುಖ್ಯ ಶಿಕ್ಷಕರು, ತತ್ಸಮಾನ ವೃಂದ ಅಧಿಕಾರಿಗಳು ಮತ್ತು ಎಲ್ಲಾ ಕಛೇರಿಗಳಲ್ಲಿರುವ ಖಾಯಂ ಬೋಧಕೇತರ ಸಿಬ್ಬಂದಿ/ ಅಧಿಕಾರಿಗಳ ಹಾಜರಾತಿಯನ್ನು ಗುರುತಿಸಲು ಮೇಲ್ವಿಚಾರಣೆ ಮಾಡಲು ಕರ್ನಾಟಕ ಅಡ್ವಾನ್ಸನ್ ಅಟೆಂಡೆನ್ ಮ್ಯಾನೇಜಮೆಂಟ್ ಸಿಸ್ಟಮ್ (ಕರ್ತವ್ಯ-ಕೆ.ಎ.ಎ.ಎಂ.ಎಸ್-KAAMS) ಮೊಬೈಲ್ ಅಪ್ಲಿಕೇಷನ್ ಅನ್ನು ಬಳಸುವ ಕುರಿತು ಆದೇಶಿಸಲಾಗಿದೆ.
2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ 451ರಲ್ಲಿ, “ಕೃತಕ ಬುದ್ಧಿಮತ್ತೆ (ಎಐ) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಹಾಗೂ ಮುಖ ಚಹರೆ ಗುರುತಿಸುವ ಅಪ್ಲಿಕೇಶನ್ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಎಲ್ಲಾ ಇಲಾಖೆಗಳಲ್ಲಿ ಕರ್ನಾಟಕ ಅಡ್ವಾನ್ ಅಟೆಂಡನ್ ಮ್ಯಾನೇಜೆಂಟ್ ಸಿಸ್ಟಮ್ (ಕರ್ತವ್ಯ ಕೆ.ಎ.ಎ.ಎಂ.ಎಸ್) ಅನ್ನು ಜಾರಿಗೆ ತರಲಾಗುವುದು’ ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ.
ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಎಲ್ಲಾ ಸಿಬ್ಬಂದಿಗೆ ಕರ್ತವ್ಯ (KAAMS) ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿಯನ್ನು ನಿರ್ವಹಿಸಲು ಪ್ರಸ್ತಾಪಿಸಲಾಗಿದ್ದು, ರಾಜ್ಯ ಸರ್ಕಾರಿ ನೌಕರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಫೋಡ್ ಮಾಡಿಕೊಳ್ಳಬಹುದು ಮತ್ತು ಕರ್ತವ್ಯ (KAAMS) ಮೊಬೈಲ್ ಅಪ್ಲಿಕೇಶನ್ ಬಳಸಿ HRMS ನಲ್ಲಿ ನೋಂದಾಯಿತ ಪ್ರಥಮ ಕೆಜಿಐಡಿ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಂಡು ತಮ್ಮ ಕರ್ತವ್ಯದ ಸ್ಥಳದಲ್ಲಿ ಹಾಜರಾತಿ ಗುರುತಿಸಬಹುದಾಗಿರುತ್ತದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯ ಸರ್ಕಾರದ ಅತಿ ದೊಡ್ಡ ಇಲಾಖೆಯಾಗಿದ್ದು ರಾಜ್ಯದಾದ್ಯಂತ ಇರುವ ಸರ್ಕಾರಿ ಪ್ರಾಥಮಿಕ, ಪ್ರೌಢ ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ಹೆಚ್ಚಿನ ಸಂಖ್ಯೆಯ ಖಾಯಂ ಶಿಕ್ಷಕರು ಕರ್ತೆವ ನಿರ್ವಹಿಸುತ್ತಿದ್ದಾರೆ. ಭೌತಿಕ ಅಥವಾ ವಿಕೇಂದ್ರೀಕೃತ ಕಾರ್ಯವಿಧಾನದ ಮೂಲಕ ನಿರ್ವಹಿಸಲಾಗುತ್ತಿರುವ ಹಾಜರಾತಿಯ ಮೇಲ್ವಿಚಾರಣೆಯು ಆಡಳಿತಾತ್ಮಕವಾಗಿ ಸಮರ್ಥತೆ ಮತ್ತು ಸಮಂಜಸತೆಯನ್ನು ಹೊಂದಿರುವುದಿಲ್ಲ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ, ಸರ್ಕಾರದ ನೀತಿ ಮತ್ತು ಶೈಕ್ಷಣಿಕ ಸುಧಾರಣೆಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗೆ ಒತ್ತು ನೀಡುತ್ತದೆ ಮತ್ತು ವಿಷಯ ಜ್ಞಾನ, ಶೈಕ್ಷಣಿಕ ಕೌಶಲಗಳು ಮತ್ತು ವೃತ್ತಿಪರ ಸಾಮರ್ಥಗಳನ್ನು ಉನ್ನತೀಕರಿಸಲು ತೆರಬೇತೆ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ತರಬೇತಿ ಕಾರ್ಯಕ್ರಮಗಳನ್ನು ರಾಜ್ಯ ಜಿಲ್ಲೆ ಮತ್ತು ಬ್ಲಾಕ್ ಹಂತದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ತರಬೇತಿ ಕಾರ್ಯಕ್ರಮದಲ್ಲಿ ಖಾಯಂ ಶಿಕ್ಷಕರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕಿರುತ್ತದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಾಲಾ ಹಂತಗಳಲ್ಲಿ ಅಂದರೆ 10 ನೇ ತರಗತಿಯ ಪರೀಕ್ಷಾ ಫಲಿತಾಂಶಗಳ ಸುರಕ್ಷಿತ ಮೌಲ್ಯಮಾಪನ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಈ ಮೌಲ್ಯಮಾಪನ ಪ್ರಕ್ರಿಯೆಯನ್ನು ಜಿಲ್ಲಾ ಹಂತದಲ್ಲಿ ವಿವಿಧ ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಮೌಲ್ಯಮಾಪನ ಕೇಂದ್ರಗಳಲ್ಲಿ ಖಾಯಂ ಶಿಕ್ಷಕರ ಹಾಜರಿಯನ್ನು ಸಹ ಖಚಿತಪಡಿಸಿಕೊಳ್ಳಬೇಕಿರುತ್ತದೆ.
ಕರ್ತವ್ಯ (Kartavya) ಮೊಬೈಲ್ ಅಪ್ಲಿಕೇಷನ್ ಮೂಲಕ ಸಿಬ್ಬಂದಿಯ ಮುಖಚಹರೆ ಪರಿಶೀಲನೆಯೊಂದಿಗೆ ಸುರಕ್ಷಿತ ಲಾಗಿನ್ ಮೂಲಕ ಅಧಿಕೃತ ಖಾಯಂ ಸಿಬ್ಬಂದಿಯ ಹಾಜರಾತಿಯನ್ನು ಗುರುತಿಸುವುದನ್ನು ಖಚಿತಪಡಿಸುತ್ತದೆ ಹಾಗೂ ಸುಧಾರಿತ ಹಾಜರಾತಿ ಡ್ಯಾಶ್ಬೋರ್ಡ್ ಮತ್ತು ವರದಿಗಳನ್ನು ತ್ವರಿತವಾಗಿ ಸಂಸ್ಥೆಯ ಮುಖ್ಯಸ್ಥರಿಗೆ ಒದಗಿಸುತ್ತದೆ. ಅಕ್ರಮ ಮತ್ತು ತಿದ್ದುಪಡಿಗೆ ಅವಕಾಶವಿಲ್ಲದಂತೆ ಹಾಜರಾತಿಯನ್ನು ಗುರುತಿಸಲು ಅತ್ಯಾಧುನಿಕ ತಂತ್ರಜ್ಞಾನಗಳ (ಜಿಐಎಸ್ ಮತ್ತು ಕೃತಕ ಬುದ್ಧಿಮತ್ತೆ) ಬಳಕೆಯನ್ನು ಉತ್ತೇಜಿಸುತ್ತದೆ ಮತ್ತು ಈ ಮೂಲಕ ಇಲಾಖೆಯ ಅಧಿಕಾರಿಗಳಿಗೆ ಸುಧಾರಿತ ಹಾಜರಾತಿ ಡ್ಯಾಶ್ಬೋರ್ಡ್ ಮೂಲಕ ವರದಿಗಳನ್ನು ಒದಗಿಸುತ್ತದೆ.
ಚಿತ್ರಕೃಪೆ: ಎಐ


