ಶಿವಮೊಗ್ಗ: ಅನೈತಿಕ ಸಂಬಂಧಕ್ಕೆ ಬೇಸತ್ತು ಬಿಜೆಪಿ ಮುಖಂಡನ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ.
ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಪತ್ನಿ ಮಂಜುಳಾ(38) ಆತ್ಮಹತ್ಯೆ ಮಾಡಿಕೊಂಡವರು. ಮನೆಯ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸ ವೀರಾಪುರ ಗ್ರಾಮದವರಾದ ಮಂಜುಳಾ ಸೊರಬ ಪುರಸಭೆ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿಯೊಂದಿಗೆ ಎರಡನೇ ಮದುವೆಯಾಗಿತ್ತು.
ಹಾರ್ಡ್ ವೇರ್ ಅಂಗಡಿ ಹೊಂದಿರುವ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯ ಸಹವಾಸ ಬಿಡುವಂತೆ ಹಲವು ಬಾರಿ ಪತ್ನಿ ಮಂಜುಳಾ ಬುದ್ಧಿವಾದ ಹೇಳಿದ್ದರು. ಈ ಬಗ್ಗೆ ಅನೇಕ ಹಿರಿಯರು, ಸಂಬಂಧಿಕರು ಕೂಡ ಬುದ್ಧಿವಾದ ಹೇಳಿದ್ದರು. ಆದರೂ ಮಹಿಳೆಯ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದ ಆರೋಪ ಕೇಳಿಬಂದಿದೆ.
ಮಂಜುಳಾಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಆರೋಪ ಕೂಡ ಕೇಳಿ ಬಂದಿದೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಂಜುಳಾ ಪೋಷಕರು ಆರೋಪಿಸಿದ್ದಾರೆ. ಸೊರಬ ಠಾಣೆಗೆ ಮಂಜುಳಾ ಅವರ ತಾಯಿ ಶೋಭಾ ಈ ಕುರಿತಾಗಿ ದೂರು ನೀಡಿದ್ದಾರೆ. ಸೊರಬ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭು ಮೇಸ್ತ್ರಿಯನ್ನು ಸೊರಬ ಪೊಲೀಸರು ಬಂಧಿಸಿದ್ದಾರೆ.