ಧಾರವಾಡ: ಧಾರವಾಡ ನಗರದ ಬಿಎಸ್ಸಿ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡ್ರಗ್ಸ್ ಪ್ರಕರಣದಿಂದ ಕೈಬಿಡಲು ಪೊಲೀಸರು ಹಣ ಕೇಳಿರುವುದೇ ವಿದ್ಯಾರ್ಥಿ ಸಾವಿಗೆ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.
ಆದಿತ್ಯ ಮ್ಯಾಗೇರಿ(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪೊಲೀಸರು ತಪಾಸಣೆ ನಡೆಸಿದ್ದರು. ತಮ್ಮ ಪುತ್ರ ಗಾಂಜಾ ಸೇವಿಸುತ್ತಿರಲಿಲ್ಲ. ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಆದರೂ ಪ್ರಕರಣದಿಂದ ಕೈಬಿಡಲು 2,000 ರೂ. ತಂದು ಕೊಡುವಂತೆ ಪೊಲೀಸರು ಕೇಳಿದ್ದಾರೆ. ಹಣ ಹೊಂದಿಸಲಾಗದೆ ಮರ್ಯಾದೆಗೆ ಅಂಜಿ ಸೋಮವಾರ ತಡರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಅವನ ಸಾವಿಗೆ ಪೊಲೀಸರೇ ಕಾರಣವೆಂದು ಮೃತನ ತಾಯಿ ಕವಿತಾ ಮ್ಯಾಗೇರಿ ಆರೋಪಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ಆದಿತ್ಯ ಸೇರಿದಂತೆ 10 ವಿದ್ಯಾರ್ಥಿಗಳು ಏಪ್ರಿಲ್ 25ರಂದು ಡ್ರಗ್ಸ್ ಡ್ರೈವ್ ವೇಳೆ ವಿದ್ಯಾಗಿರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆದರೆ, ಪರೀಕ್ಷೆ ವೇಳೆ ವರದಿ ನೆಗೆಟಿವ್ ಬಂದಿತ್ತು. ಪೊಲೀಸರು ವಿದ್ಯಾರ್ಥಿಗಳಿಂದ ಹಣ ನೀಡುವಂತೆ ಒತ್ತಾಯಿಸಿದ್ದರು. ಸೋಮವಾರ ರಾತ್ರಿ ತಾಯಿಗೆ ಕರೆ ಮಾಡಿದ ಆದಿತ್ಯ 2000 ರೂ. ಕೇಳಿದ್ದ. ಆದರೆ ತಕ್ಷಣವೇ ಹಣ ನೀಡಲು ಸಾಧ್ಯವಾಗಿರಲಿಲ್ಲ. ಪೊಲೀಸರು ಗಾಂಜಾ ಕೇಸ್ ಹಾಕುತ್ತಾರೆ ಎನ್ನುವ ಭಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರ ಕಿರುಕುಳಗೆ ಸಾವಿಗೆ ಕಾರಣವೆಂದು ತಾಯಿ ಆರೋಪಿಸಿದ್ದಾರೆ.