ಕಲಬುರಗಿ: ಶೀಘ್ರವೇ 8000 ಪೊಲೀಸರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಕಲಬುರಗಿ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಮಧುಕರ ಶೆಟ್ಟಿ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ 13ನೇ ಹಂತದ ಪಿಎಸ್ಐ(ಸಿವಿಲ್), 12ನೇ ಹಂತದ ಆರ್.ಎಸ್.ಐ., ಸ್ಪೆಷಲ್ ಆರ್.ಎಸ್.ಐ. ಮತ್ತು ಆರನೇ ಹಂತದ ಪಿಎಸ್ಐ(ಕೆ.ಎಸ್.ಐ.ಎಸ್.ಎಫ್.) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ವಿವಿಧ ತುಕಡಿಗಳನ್ನು ವೀಕ್ಷಿಸಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಹಂಚಿಕೆ ಪ್ರಮಾಣ ಸಮಸ್ಯೆ ನಿವಾರಣೆಯಾಗಿದೆ. 8000 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನೇಮಕಾತಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಸಿಕ್ಕಿರುವ ಅವಕಾಶವನ್ನು ನೊಂದವರ ಕಣ್ಣೀರು ಒರೆಸಲು, ಸಮಸ್ಯೆ ಪರಿಹರಿಸಲು ಬಳಸಿಕೊಳ್ಳಬೇಕು. ತುಳಿತಕ್ಕೆ ಒಳಗಾದ ಬಡವರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರನ್ನು ಮುಖ್ಯ ವಾಹಿನಿಗೆ ತರಲು ನೆರವಾಗುವ ಮೂಲಕ ಪೊಲೀಸರು ಸೇವಾ ಧರ್ಮ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.
ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸ್ ಮೊದಲನೇ ಸ್ಥಾನದಲ್ಲಿದೆ ಎಂದು ಕಳೆದ ವರ್ಷ ಇಂಡಿಯಾ ಜಸ್ಟಿಸ್ ಎಂಬ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ಇಡೀ ದೇಶದಲ್ಲಿಯೇ ಮೂರನೆಯ ಮಾದರಿ ಠಾಣೆ ಎಂದು ಗುರುತಿಸಲಾಗಿದ್ದು, ಇಂತಹ ಪೊಲೀಸ್ ಠಾಣೆಗಳು ರಾಜ್ಯದಲ್ಲಿ ಹೆಚ್ಚಾಗಲಿ ಎಂದು ಪರಮೇಶ್ವರ್ ಆಶಿಸಿದ್ದಾರೆ .
ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ, ತರಬೇತಿ ವಿಭಾಗದ ಎಡಿಜಿಪಿ ದೇವಜ್ಯೋತಿ ರೇ, ಪೊಲೀಸ್ ತರಬೇತಿ ಮಹಾವಿದ್ಯಾಲಯದ ನಿರ್ದೇಶಕ ಎಂ. ಪುಟ್ಟಮಾದಯ್ಯ ಉಪಸ್ಥಿತರಿದ್ದರು.