ಕಾಬೂಲ್ : ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಹೇಳಿಕೆಯ ಪ್ರಕಾರ, ಬುಧವಾರ ಅಫ್ಘಾನಿಸ್ತಾನದಲ್ಲಿ ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ.ಈ ಭೂಕಂಪವು ಭೂಮಿಯ ಮೇಲ್ಮೈಯಿಂದ 140 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ‘X’ (ಹಿಂದಿನ ಟ್ವಿಟರ್) ನಲ್ಲಿ ಮಾಹಿತಿ ನೀಡಿರುವ NCS, “ದಿನಾಂಕ 15/04/2026 ರಂದು ಭಾರತೀಯ ಕಾಲಮಾನ ಬೆಳಗ್ಗೆ 09:30:03 ಕ್ಕೆ ಅಫ್ಘಾನಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ” ಎಂದು ತಿಳಿಸಿದೆ. ಇದಕ್ಕೂ ಮೊದಲು, ಏಪ್ರಿಲ್ 12 ರಂದು ಕೂಡ ಅಫ್ಘಾನಿಸ್ತಾನದಲ್ಲಿ 150 ಕಿಮೀ ಆಳದಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಭಾರತದಿಂದ ಮಾನವೀಯ ನೆರವು
ಅಫ್ಘಾನಿಸ್ತಾನದಲ್ಲಿ ಪ್ರವಾಹ ಮತ್ತು ಭೂಕಂಪದಿಂದ ಬಾಧಿತರಾದವರಿಗೆ ಭಾರತವು ಮಾನವೀಯ ನೆರವು ನೀಡಿದೆ ಎಂದು ಏಪ್ರಿಲ್ 6 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್, ಭಾರತವು ವಿಪತ್ತು ಪರಿಹಾರ ಸಾಮಗ್ರಿಗಳಾದ ಅಡುಗೆ ಮನೆ ಸೆಟ್ಗಳು, ನೈರ್ಮಲ್ಯ ಕಿಟ್ಗಳು, ಪ್ಲಾಸ್ಟಿಕ್ ಶೀಟ್ಗಳು, ಟಾರ್ಪಾಲಿನ್ ಹಾಗೂ ಮಲಗುವ ಚೀಲಗಳನ್ನು ಕಳುಹಿಸಿಕೊಟ್ಟಿದೆ ಎಂದು ಹೇಳಿದ್ದಾರೆ. “ಈ ಸವಾಲಿನ ಸಮಯದಲ್ಲಿ ಭಾರತವು ಅಫ್ಘಾನಿಸ್ತಾನದ ಜನರೊಂದಿಗೆ ನಿಂತಿದೆ” ಎಂದು ಅವರು ತಿಳಿಸಿದ್ದಾರೆ.
ಸತತ ನೈಸರ್ಗಿಕ ವಿಕೋಪಗಳು
ಟೋಲೋ ನ್ಯೂಸ್ (TOLO News) ವರದಿಯ ಪ್ರಕಾರ, ಅಫ್ಘಾನಿಸ್ತಾನದ 25 ಪ್ರಾಂತ್ಯಗಳಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳಿಂದಾಗಿ ಕಳೆದ ಎರಡು ದಿನಗಳಲ್ಲಿ ಮೃತರ ಸಂಖ್ಯೆ 35ಕ್ಕೇರಿದೆ ಮತ್ತು 52 ಜನರು ಗಾಯಗೊಂಡಿದ್ದಾರೆ.ಅಫ್ಘಾನಿಸ್ತಾನವು ಅದರಲ್ಲೂ ವಿಶೇಷವಾಗಿ ಹಿಂದೂ ಕುಶ್ ಪ್ರದೇಶವು ಭೂಕಂಪನ ವಲಯದಲ್ಲಿರುವುದರಿಂದ ಪದೇ ಪದೇ ಭೂಕಂಪಗಳಿಗೆ ತುತ್ತಾಗುತ್ತದೆ. ಈ ದೇಶವು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್ಗಳ ಘರ್ಷಣೆಯ ವಲಯದಲ್ಲಿದೆ. ಇದರಿಂದಾಗಿ ಇಲ್ಲಿನ ಜನಜೀವನ ಸದಾ ಅಪಾಯದ ಅಂಚಿನಲ್ಲೇ ಇರುತ್ತದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (UNOCHA) ಅಭಿಪ್ರಾಯಪಟ್ಟಿದೆ.
ದಶಕಗಳ ಸಂಘರ್ಷ ಮತ್ತು ಸೀಮಿತ ಅಭಿವೃದ್ಧಿಯಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ಇಲ್ಲಿನ ಸಮುದಾಯಗಳಿಗೆ, ಸತತವಾಗಿ ಸಂಭವಿಸುತ್ತಿರುವ ಇಂತಹ ನೈಸರ್ಗಿಕ ವಿಕೋಪಗಳು ಗಾಯದ ಮೇಲೆ ಬರೆ ಎಳೆದಂತಾಗಿವೆ.